Wednesday, November 5, 2008

Raghavendra Patil in The Sunday Indian - Rajyotsava Special Issue


ಮನದಾಳದಿಂದ ಮರೆಯಾಗದ ಮಾನವೀಯ ಮುಖಗಳು

ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಗೆ ಅಂದು ಮುಂಜಾನೆ ಟಿಎಸ್‌ಐ ಭೇಟಿ ನೀಡಿದಾಗ ನೀಲಾಗಸದಲ್ಲಿ ಬೆಳ್ಮೋಡಗಳ ತೇರು ಹೊರಟಿತ್ತು. ಕನ್ನಡದ ಶಕ್ತ ಕಥೆಗಾರ ರಾಘವೇಂದ್ರ ಪಾಟೀಲರೂ ತಮ್ಮ ಬರಹಗಳಿಗೆ ಪ್ರೇರಣೆ ನೀಡಿದ ಸಂಗತಿಗಳನ್ನು ಹಂಚಿಕೊಳ್ಳಲು ಸಜ್ಜಾಗಿದ್ದರು. ಬೆಟಗೇರಿ, ಗೋಕಾಕ ಭಾಗದ ಭಾಷೆಯನ್ನು ತಮ್ಮ ಗದ್ಯಗಳಲ್ಲಿ ಚೆಂದಗೆ ದುಡಿಸಿಕೊಂಡ ಪಾಟೀಲರು ಇಲ್ಲಿ ತಮ್ಮ ಕೆಲವು ಅನುಭವಗಳನ್ನು ದಾಖಲಿಸಿದ್ದಾರೆ. ತಮ್ಮ ಮನೋಭೂಮಿಕೆಯೊಳಗೆ ಎಂದೂ ಮರೆಯಾಗದೆ ಗಟ್ಟಿಯಾಗಿ ಬೇರುಬಿಟ್ಟ ಸಂಗತಿಗಳನ್ನು ಟಿಎಸ್‌ಐ ವಿಶೇಷ ಸಂಚಿಕೆಗಾಗಿ ಹೇಳಿದ್ದಾರೆ...
ಬಿ.ಎಸ್. ನಾರಾಯಣ ಸ್ವಾಮಿ



ತುಂಬಾ ಹಿಂದಿನ ಘಟನೆ. ಆಗ ನಾನಿನ್ನೂ ಹುಟ್ಟಿರಲಿಲ್ಲ, 1908-10ನೇ ಇಸ್ವಿ ಇರಬಹುದು. ಅದು ನಮ್ಮ ತಾತ ಶ್ರೀನಿವಾಸರಾಯರ ಕಾಲ. ನಮ್ಮ ತಂದೆ ಎಂಟ್ಹತ್ತು ವರ್ಷದವರಿದ್ದಿರಬೇಕು. ಆಗ ನಮ್ಮ ಘಟಪ್ರಭಾದ ಪೂರ್ವಭಾಗ ಅಂದರೆ ಗೋಕಾಕ ಭಾಗ ಬರಗಾಲದ ನಾಡಾಗಿತ್ತು. ಪ್ರತಿ ಎರಡು ವರ್ಷಕ್ಕೊಮ್ಮೆ ಅಲ್ಲಿ ಬರಗಾಲ ಕಾಯಂ ಆಗಿತ್ತು. ಆ ಬಾರಿ ಡೌಗಿ ಬರಗಾಲ ಬಂದಿತ್ತು. ಡೌಗಿ ಅಂದರೆ ತಲೆಬುರುಡೆ. ಆ ಬರಗಾಲದಲ್ಲಿ ಜನರಿಗೆ ತಿನ್ನಲು ಏನೂ ಸಿಗದೆ ಕೈಕಾಲುಗಳೆಲ್ಲಾ ತೀರಾ ಕೃಶವಾಗಿ ಕೇವಲ ತಲೆಬುರುಡೆಯಷ್ಟೇ ಕಾಣುತ್ತಿತ್ತಂತೆ. ಹೀಗಾಗಿ ಅದನ್ನು ಡೌಗಿ ಬರಗಾಲ ಎನ್ನುತ್ತಿದ್ದರು. ನಮ್ಮದು ದೊಡ್ಡ ಜಮೀನ್ದಾರಿಕೆಯ ಮನೆತನ. ಎಷ್ಟು ದೊಡ್ಡದು ಅಂದರೆ 200 ಕೂರಿಗೆ ಅರ್ಥಾತ್ 800 ಎಕರೆಯಷ್ಟು ಜಮೀನು ನಮ್ಮದು. ಆ ಜಮೀನು ಮೂರ್‍ನಾಲ್ಕು ಗ್ರಾಮಗಳಲ್ಲಿ ವ್ಯಾಪಿಸಿತ್ತು. ಇಷ್ಟು ದೊಡ್ಡ ಜಮೀನ್ದಾರರಾದರೂ ನಾವು ಶ್ರೀಮಂತರಾಗಿದ್ದಿಲ್ಲ. 800 ಎಕರೆ ಜಮೀನಿನಿಂದ ಆ ಬಾರಿ ಬಂದ ಫಸಲು ಎಷ್ಟಿತ್ತು ಎಂದರೆ ಒಂದು ಸಣ್ಣ ಸೀಮೆಎಣ್ಣೆ ಡಬ್ಬದಲ್ಲಿ ತುಂಬಬಹುದಾದಷ್ಟು ಮಾತ್ರ! ನಮ್ಮದೋ ಸುಮಾರು 25 ಮಂದಿ ಇದ್ದ ಅವಿಭಕ್ತ ಕುಟುಂಬ ಮತ್ತು ಪಕ್ಕಾ ಸಾಂಪ್ರದಾಯಿಕ ಕುಟುಂಬ. ದಿನಾ ಒಂದಲ್ಲಾ ಒಂದು ಹಬ್ಬ-ಹರಿದಿನ ಇದ್ದೇ ಇರುತ್ತಿತ್ತು. ಪಿತೃಪಕ್ಷಕ್ಕೆ ಪುರೋಹಿತರನ್ನು ಊಟಕ್ಕೆ ಕರೆದಾಗ ಅವರಿಗೆ ಕೊಡಬೇಕಾದ ಒಂದು ಆಣೆ ದಕ್ಷಿಣೆಯನ್ನು ಕೂಡಾ ಉದ್ದರಿ ತರುತ್ತಿದ್ದರು. ಆ ವರ್ಷದ ಉದ್ದರಿಯನ್ನು ಸಾಲ ಕೊಟ್ಟವರು ಸುಗ್ಗಿ ವೇಳೆಯಲ್ಲಿ ಬಂದು ಹಣ ವಾಪಸು ಪಡೆದು ಹೋಗುತ್ತಿದ್ದರು. ಅಂಥಾ ಬಡತನ ನಮ್ಮದು. ಆಗ ನಮ್ಮ ಅಜ್ಜ ಬೆಟಗೇರಿಯ ಪಟೇಲರಾಗಿದ್ದಲ್ಲದೆ ಗೋಸಬಾಳ ಮತ್ತು ಬಗರನಾಳ ಗ್ರಾಮದ ಶಾನುಭೋಗರೂ ಆಗಿದ್ದರು. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಬಗರನಾಳ ಗ್ರಾಮದ ಕಾವಾಡಿ ಮತ್ತು ತೋಟಿಗ ಮನೆತನದ ಇಬ್ಬರು ಹಿರಿಯರು ಹಾಗೂ ಗೋಸಬಾಳದ ಬುಳ್ಳಿ ಮನೆತನದ ಹಿರಿಯರು ನಮ್ಮ ಮನೆಗೆ ಬಂದರು. "ಕುಲಕರ್ಣೀರೇ ಈಗ ಬರಗಾಲ ಅಂತಾರು. ಮತ್ತೆ ನಿಮಗೆ ಎಷ್ಟು ಧಾನ್ಯ ಬಂದಿದೆ ಈ ಬಾರಿ" ಎಂದು ಕೇಳಿದರು. ಆಗ ನಮ್ಮ ಅಜ್ಜ ಆ ಮೂವರನ್ನೂ ಒಳಮನೆಗೆ ಕರೆದುಕೊಂಡು ಹೋಗಿ -ಒಳಮನೆಗೂ ತುಂಬಾ ನಡೀಬೇಕಾದಷ್ಟು ದೊಡ್ಡ ಮನೆ ಅದು. ಸುಮಾರು ಅರ್ಧ ಎಕರೆ ವ್ಯಾಪಿಸಿದ್ದ, ಎರಡು ನೂರು ವರ್ಷ ಹಳೆಯದಾದ ವಾಡೆ ಅದು. ಗೋಡೆಗಳೇ ಎಂಟೆಂಟು ಅಡಿ ಇರ್‍ತಿದ್ದವು. ಅಂಥಾ ವಾಡೆಯ ಒಳಮನೆಗೆ ಕರೆದುಕೊಂಡು ಹೋಗಿ- ಸಣ್ಣ ಸೀಮೆಎಣ್ಣೆ ಡಬ್ಬವನ್ನು ತೋರಿಸಿ "ನೋಡ್ರಪಾ ಈ ಬಾರಿಯ ಸುಗ್ಗಿ ಅಂದ್ರೆ ಇಷ್ಟು" ಎಂದರು. ಅದಕ್ಕೆ ಹಿರಿಯರು "ಅಲ್ರೀ ಕುಲಕರ್ಣೀರಾ, ನಿಮ್ಮ ಮನೆಯಲ್ಲಿ ನೋಡಿದರೆ ಇಷ್ಟು ಮಂದಿ ಇದೀರಿ. ಬೊಗಸೆಯಷ್ಟು ಧಾನ್ಯ ತಗೊಂಡು ಹೆಂಗೆ ಮಾಡ್ತೀರಿ" ಎಂದರು. ಅದಕ್ಕೆ ನಮ್ಮ ಅಜ್ಜ -ಆತ ತುಂಬಾ ಸಾತ್ವಿಕ ಮನುಷ್ಯ- 'ದೇವರು ಮಾಡಿದ ಹಾಗೆ ಆಗಲಿ' ಎಂಬಂತೆ ಮೇಲಕ್ಕೆ ಕೈ ತೋರಿಸಿದ. ಅದಕ್ಕವರು, "ದೇವರೇನ್ರೀ ಗುಡಿಯಾಗೆ ಇರ್‍ತಾವು. ನಾವು ನೈವೇದ್ಯ ಕೊಟ್ಟರೆ ಬಂದು ತಗೊಂತಾವು. ದೇವ್ರು ಏನೂ ಮಾಡಂಗಿಲ್ರೀ. ಈಗ ಮನುಷ್ಯಾರಿಗೆ ಮನುಷ್ಯಾರೇ ಆಗಬೇಕ್ರಿ. ಅದಕ್ಕಾ, ನಾವು ನಾಳೆ, ನಾಳಿದ್ದ ಒಂದು ನಾಲ್ಕು ಚಕ್ಕಡಿ ಕಳಿಸ್ತೇವು. ನಿಮ್ಮವು ಪಾತ್ರೆ, ಪಗಡ, ಹಾಸಿಗೆ ಏನಿದಾವು ಅವನ್ನೆಲ್ಲಾ ಕಟ್ಟಿಕೊಂಡು ನಮ್ಮ ಬಗರನಾಳಕ್ಕೆ ಬಂದು ಬಿಡಬೇಕು" ಎಂದರು. ಅದಕ್ಕೂ ನಮ್ಮಜ್ಜ 'ದೇವರ ಇಚ್ಛೆಯಂತೆ ಆಗಲಿ' ಎಂಬಂತೆ ಮೇಲಕ್ಕೆ ಕೈತೋರಿಸಿದ. ಅದರಂತೆ ಅವರು ಚಕ್ಕಡಿ ಕಳಿಸಿದ ಮೇಲೆ ಎಲ್ಲರೂ ಪಾತ್ರೆ, ಪಗಡ ಕಟ್ಟಿಕೊಂಡು ಬಗರನಾಳಕ್ಕೆ ಹೋದರು. ಮೊದಲೇ ಹೇಳಿದಂತೆ ನಮ್ಮದು 25 ಮಂದಿ ಇದ್ದ ಅವಿಭಕ್ತ ಕುಟುಂಬ. ಬಸರು, ಬಾಣಂತನ ಇವೆಲ್ಲಾ ಸದಾಕಾಲ ಇದ್ದವೇ. ಜೊತೆಗೆ ನಮ್ಮದೇ ನಾನಾ ಆಚರಣೆಗಳು ಬೇರೆ. ಇವಕ್ಕೆಲ್ಲಾ ಒಂದು ಸ್ವಲ್ಪ ಕೂಡಾ ಕೊರತೆಯಾಗದಂತೆ ಎರಡು ವರ್ಷಗಳ ಕಾಲ ಆ ಊರಿನ ರೈತರು ನಮ್ಮ ದೊಡ್ಡ ಕುಟುಂಬವನ್ನ ಸಾಕಿದರು. ಎರಡು ವರ್ಷವಾದ ಮೇಲೆ ಮಳೆ ಬಂದು ಬರಗಾಲ ಮುಗಿದ ಮೇಲಷ್ಟೇ ಮತ್ತೆ ಚಕ್ಕಡಿಯಲ್ಲಿ ನಮ್ಮ ಊರಿಗೆ ಕಳುಹಿಸಿಕೊಟ್ಟರು. ಈ ಘಟನೆಯನ್ನ ನಮ್ಮ ಚಿಕ್ಕಪ್ಪ ಆನಂದಕಂದರೂ ಸೇರಿದಂತೆ ನಮ್ಮ ಹಿರಿಯರು ತುಂಬಾ ಜನ ಹೇಳುತ್ತಿದ್ದರು. ಇದು ನಾನು ಎಂದೂ ಮರೆಯಲಿಕ್ಕಾಗದಂಥ ಘಟನೆ. ನಾವು ಸಮಾಜವನ್ನು ಹೇಗೆ ನೋಡಬೇಕು ಎಂಬುದನ್ನು ಕಲಿಸಿಕೊಟ್ಟ ಘಟನೆ. ಹೀಗೆ ಸಹಾಯ ಮಾಡುವುದು ಆ ಕಾಲದ ಮೌಲ್ಯ ಆಗಿತ್ತಾದರೂ ಎರಡು ವರ್ಷಗಳ ಕಾಲ ದೊಡ್ಡದೊಂದು ಕುಟುಂಬವನ್ನು ಸಾಕುವುದಿದೆಯಲ್ಲಾ ಅದು ನನ್ನನ್ನು ಬಹಳವಾಗಿ ಕಾಡುವಂಥ ಸ್ಮೃತಿ.
***
ಇನ್ನೊಂದು ಇಂಥದೇ ಒಂದು ಘಟನೆ. ಅದು ನಮ್ಮ ಮನೆತನದ ಪ್ರತಿಷ್ಠೆಗೆ ಸಂಬಂಧಪಟ್ಟಿದ್ದು. ಬಗರನಾಳ ಮಾರ್ಗದಲ್ಲೇ ನಮ್ಮ ಕುಟುಂಬಕ್ಕೆ ಸೇರಿದ ಇಪ್ಪತ್ತೈದು ಎಕರೆ ಜಮೀನಿತ್ತು. ಅದು ಸ್ವಾತಂತ್ರ್ಯ ಪೂರ್ವ ಕಾಲ ಅಂತ ಕಾಣಿಸುತ್ತೆ. ಆಗ ಸರ್ಕಾರಿ ಸಾಲ ಪಡೆದು ತೀರಿಸದೇ ಇದ್ದಿದ್ದಕ್ಕೋ ಏನೋ, ನಮ್ಮ ಜಮೀನನ್ನ ಹರಾಜು ಹಾಕಬೇಕು ಎಂದು ಡಿಕ್ರೀ ಬಂತು. ಇಂಥ ದಿನ ಊರ ಹನುಮಂತ ದೇವರ ಗುಡಿ ಬಳಿ ಹರಾಜು ಹಾಕಲಾಗ್ತದೆ. ಇಚ್ಛೆ ಇರುವವರು ಭಾಗವಹಿಸಬಹುದು ಅಂತ ಡಂಗೂರ ಸಾರಲಾಯಿತು. ಆಗ ನಮ್ಮ ತಂದೆಗೆ ಒಂದು ನಲ್ವತ್ತು ವರ್ಷ ವಯಸ್ಸಿದ್ದಿರಬಹುದು. ಅವರಿಗೆ ನಮ್ಮ ಮನೆತನದ ಪ್ರತಿಷ್ಠೆ ಕಾಪಾಡಬೇಕು, ಜಮೀನನ್ನ ಉಳಿಸಿಕೊಳ್ಳಬೇಕು ಎಂಬ ಹಂಬಲ. ಇದರ ಜೊತೆಗೆ ಊರಿನ ಕೆಲವು ಗೌಡರು, ಹಿರಿಯರು ಕೂಡಾ ನಮ್ಮ ತಂದೆ ಬಳಿ ಬಂದು "ಕುಲಕರ್ಣೀರೇ ಹೆಂಗರ ಮಾಡಿ ಇದನ್ನು ಉಳಿಸಿಕೊಳ್ಳಬೇಕು. ತಲೆತಲಾಂತರದ ಆಸ್ತಿ ಹರಾಜಲ್ಲಿ ಹೋಗಬಾರದು" ಎಂದು ಬೇರೆ ಒತ್ತಾಯ ಮಾಡಿ ಹೋಗಿದ್ದರು. ಮೊದಲೇ ವೈಯಕ್ತಿಕವಾಗಿ ಇದ್ದ ಇಚ್ಛೆ, ಜೊತೆಗೆ ನೆರೆಹೊರೆಯವರು, ಸ್ನೇಹಿತರ ಒತ್ತಾಯ -ಇವೆಲ್ಲಾ ಸೇರಿ ಜಮೀನು ಉಳಿಸಿಕೊಳ್ಳುವ ಛಲದಿಂದಲೇ ನಮ್ಮ ತಂದೆ ಸವಾಲಿಗೆ ಹೋಗಿ ಕುಳಿತರು. ನಮ್ಮ ಕುಟುಂಬಕ್ಕೆ ಸ್ವಲ್ಪ ವಿರೋಧಿಯಾಗಿದ್ದ ರಾಮಣ್ಣ ಎಂಬಾತನೂ ಸವಾಲು ಹಾಕಲು ಅಲ್ಲಿಗೆ ಬಂದಿದ್ದ. ಅದು 1940ರ ಇಸ್ವಿ ಇದ್ದಿರಬೇಕು. ಆಗ ಒಂದೊಂದು ರೂಪಾಯಿ ಕೂಡಾ ಈಗಿನ ಸಾವಿರ ರೂಪಾಯಿಗಳಿಗೆ ಸಮವಾಗಿದ್ದ ಕಾಲ. ಆ ರಾಮಣ್ಣ ಎಂಬಾತ ಐದು, ಹತ್ತು ರೂಪಾಯಿ ಲೆಕ್ಕದಲ್ಲಿ ಕೂಗುತ್ತಿದ್ದರೆ, ನಮ್ಮ ತಂದೆ ನೂರು, ಇನ್ನೂರರ ಲೆಕ್ಕದಲ್ಲಿ ಕೂಗುತ್ತಿದ್ದರು. ಅವನು ಸನಿಹಕ್ಕೇ ಬರಬಾರದು ಎಂಬ ಅರ್ಥದಲ್ಲೇ ಅವರು ಕೂಗುತ್ತಿದ್ದರು. ಆದರೆ ಅವನು ಬಿಡಂಗಿಲ್ಲ. ಹೀಗೇ ನಡೆದು, ಸುಮಾರು 27 ಸಾವಿರ ರೂಪಾಯಿಗೆ ಸವಾಲು ನಿಂತಿತು. ಆಗಿನ ಕಾಲಕ್ಕೆ ಅದು ಕಲ್ಪಿಸಲೂ ಸಾಧ್ಯವಾಗದಷ್ಟು ಪ್ರಮಾಣದ ಹಣ. ವಾಸ್ತವದಲ್ಲಿ ಸಾಧ್ಯವೇ ಇಲ್ಲ. ಒಂದು ರೀತಿ ಭಾವಾವೇಶಕ್ಕೆ ಒಳಗಾಗಿಯಷ್ಟೇ ನಮ್ಮ ತಂದೆ ಹಾಗೆ ಕೂಗಿಬಿಟ್ಟಿದ್ದರು. ಸರಿ ಜಮೀನು 27 ಸಾವಿರಕ್ಕೆ ಬಲರಾಮಪ್ಪ ಅವರಿಗೆ ಸವಾಲಾಗಿದೆ. ನಾಳೆ ಇಷ್ಟು ಹೊತ್ತಿನ ಒಳಗೆ ಹಣ ತಂದು ಕೊಟ್ಟರೆ ಜಮೀನು ಅವರದಾಗುತ್ತದೆ. ಇಲ್ಲದೆ ಹೋದರೆ ಸಮೀಪದ ಬಿಡ್‌ದಾರ ರಾಮಣ್ಣನಿಗೆ ಜಮೀನು ಆಗುತ್ತದೆ ಎಂದು ಘೋಷಣೆ ಆಯಿತು. ಸರಿ, ನಮ್ಮ ತಂದೆಯವರು ಮನೆಗೆ ಬಂದವರೇ ಅದೇ ಚಿಂತೆಯಲ್ಲಿ ಮುಳುಗಿದರು. ಅಷ್ಟೊಂದು ಹಣವನ್ನು ಒದಗಿಸುವುದಿರಲಿ, ಕಲ್ಪಿಸುವುದೂ ಆಗ ಕಷ್ಟವಿತ್ತು. ಅಷ್ಟು ಹೊತ್ತಿಗಾಗಲೇ ಹರಾಜಿನಲ್ಲಿ ನಡೆದ ವಿಷಯ ಸುತ್ತಮುತ್ತಲ ಹಳ್ಳಿಗಳಿಗೆಲ್ಲಾ ಪ್ರಸಾರವಾಗಿಬಿಟ್ಟಿತ್ತು. ಹೀಗೇ ಚಿಂತೆಯಲ್ಲಿ ಮುಳುಗಿದ್ದಾಗ ಬೆಣ್ಣಿ ಬಾಳವ್ವ ಎಂಬ ಮುದುಕಿ ನಮ್ಮ ಮನೆಗೆ ಬಂದಳು. ಲಿಂಗಾಯತರ ಮುದುಕಿ ಆಕೆ. ಬಂದವಳೇ "ಏನು ಕುಲಕರ್ಣೀರೇ ದುಡ್ಡಿಗ್ಯಾಕೆ ಚಿಂತೆ ಮಾಡುತ್ತೀರಿ" ಎಂದವಳೇ ತನ್ನ ಹಳೇ ಮಡಕೆಯನ್ನು ಸುರಿದಳು. ಅದರೊಳಗಿಂದ ಒಂದೇ ಸಮನೆ ಬೆಳ್ಳಿನಾಣ್ಯಗಳ ಸಣ್ಣ ರಾಶಿಯೇ ನೆಲದ ಮೇಲೆ ಸುರಿದುಬಿತ್ತು. "ಇವನ್ನ ಮುರಿಸಿ ಜಮೀನು ಉಳಿಸಿಕೊಳ್ರಿ. ಏನು ಯೋಚನೆ ಮಾಡ್ತೀರಿ. ನಿಮ್ಮ ಮರ್ಯಾದೆ ಹೋದ್ರೆ ಬೇರೆಯಲ್ಲಾ, ನಮ್ಮ ಊರಿನ ಮರ್ಯಾದೆ ಹೋದ್ರೆ ಬೇರೆಯಲ್ಲಾ" ಎಂದಳು. ಅದೇ ವೇಳೆಗೆ ನಮ್ಮ ಊರಿನ ಒಬ್ಬ ಕುರುಬರವ ಬಂದು, "ಕುಲಕರ್ಣೀರೆ ಯಾಕೆ ಚಿಂತೆ ಮಾಡ್ತೀರಿ? ಆ ಜಮೀನಿಗೆ ದುಡ್ಡು ಒದಗಿಸೋದು ಯಾವ ದೊಡ್ಡ ಮಾತು. ನನ್ನ ಕುರಿಮಂದೆಯನ್ನೆಲ್ಲಾ ಮಾರಿ ದುಡ್ಡು ಕೊಡ್ತೀನಿ ತಗೊಳ್ಳಿ" ಎಂದ. ಹೀಗೆ ಆ ಮುದುಕಿ ಮತ್ತು ಕುರುಬ ವ್ಯಕ್ತಿಯ ನೆರವಿನಿಂದ ಆ ಜಮೀನು ನಮ್ಮದಾಯಿತು. ಇದು ನನ್ನ ಮನೋಭೂಮಿಕೆಯೊಳಗೆ ಎಂದು ಮರೆಯಾಗದ ಮತ್ತೊಂದು ಸ್ಮೃತಿ. ಜಮೀನ್ದಾರಿಕೆಯೆಂದರೆ ಸಾಮಾನ್ಯವಾಗಿ ಶೋಷಣೆಯ ಕಲ್ಪನೆ ಮೂಡುತ್ತದೆ. ಆದರೆ ನಮ್ಮ ಭಾಗದಲ್ಲಿ ಹಾಗಿರಲಿಲ್ಲ. ವಿವಿಧ ಜಾತಿ, ಸಮುದಾಯಗಳ ನಡುವಿನ ಸಾಮರಸ್ಯ ಹೇಗಿತ್ತು ನೋಡಿ. ಹಾಗೆಯೇ ನಮ್ಮ ಮನೆತನದ ಪ್ರತಿಷ್ಠೆ ಊರಿನೆಲ್ಲ ಜನರ ಅಪೇಕ್ಷೆಯಾಗಿತ್ತು. ಅದು ಅವರ ಪ್ರತಿಷ್ಠೆಯೂ ಆಗಿತ್ತು.
***
ದೈವಾರಾಧನೆಯ ಪರಮಾವಧಿ, ಅಲೌಕಿಕತೆ ಮತ್ತು ಅಗೋಚರ ಶಕ್ತಿಗೆ ಸಂಬಂಧಪಟ್ಟ ಒಂದು ಘಟನೆ ನಾನು ಆರನೇ ತರಗತಿ ಓದುತ್ತಿದ್ದಾಗ ನಡೆಯಿತು. ನಮ್ಮ ಗೋಸಬಾಳು ಗ್ರಾಮದಲ್ಲಿ ಹನುಮಂತದೇವರ ಗುಡಿ ತುಂಬಾ ಪ್ರಸಿದ್ಧವಾದುದು. ಅಲ್ಲಿ ಚೈತ್ರ ಮತ್ತು ಕಾರ್ತಿಕ ಮಾಸಗಳಲ್ಲಿ ಹೋಳಿ ಆಚರಣೆ ನಡೆಯುತ್ತಿತ್ತು. ಒಮ್ಮೆ ಅಂತಹ ಆಚರಣೆಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆಯೇ ಕಾಣೆಯಾದ. ಆತನಿಗಾಗಿ ಸುತ್ತಮುತ್ತಲ ಗ್ರಾಮಗಳಲ್ಲೆಲ್ಲಾ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಲಿಲ್ಲ. ನಮ್ಮ ಹನುಮಂತದೇವರ ಗುಡಿ ವಿಶಾಲವಾಗಿತ್ತು. ಅದರ ಗೋಪರದ ಒಳಭಾಗದಲ್ಲಿ ಅಟ್ಟಣಿಗೆಗಳಿದ್ದವು. ಒಮ್ಮೆ ದೇವಾಲಯದ ಸ್ವಚ್ಛ ಮಾಡುವವರು ಆ ಅಟ್ಟಣಿಗೆ ಹತ್ತಿದಾಗ ಅಲ್ಲಿ ವ್ಯಕ್ತಿಯೊಬ್ಬ ಧ್ಯಾನ ಮಾಡುತ್ತಿರುವುದು ಕಂಡಿತು. ಅದು ಯಾರೆಂದರೆ ಕಾಣೆಯಾಗಿದ್ದನಲ್ಲಾ ಯುವಕ ಅವನೇ. ಸುಮಾರು 15 ದಿನಗಳ ಕಾಲ ಊಟವೂ ಇಲ್ಲದೆ ಅವನು ಆ ಅಟ್ಟಣಿಗೆಯಲ್ಲಿ ದೇವರ ಧ್ಯಾನ, ಭಜನೆ ಮಾಡುತ್ತಿದ್ದನಂತೆ. ಅವನನ್ನು ಕೆಳಗೆ ಕರೆತಂದ ಮೇಲೆ ಆತ ದೇವರು ಆವಾಹನೆಯಾದಂತೆ ಮಾತನಾಡತೊಡಗಿದ. ನಮ್ಮ ಹನುಮಂತದೇವರ ಗುಡಿಯ ಪಲ್ಲಕ್ಕಿಯ ದಂಡಿಗೆ ಈ ಮೊದಲೇ ಮುರಿದು ಹೋಗಿತ್ತು. ಅದರ ಬಗ್ಗೆ ಮಾತನಾಡಿದ ಆತ, "ನಮ್ಮ ಹಣಮದ್ದೇವರ ಪಾಲಕಿ ದಂಡಿಗೆ ಮುರಿದೈತಿ. ಅದಕ್ಕಾಗಿ ದೇವಲೋಕಕ್ಕೆ ಹೋಗಿ ಅಲ್ಲಿಂದ ದಂಡಿಗೆ ತರುತ್ತೇನು" ಎನ್ನತೊಡಗಿದ. ತಿಳಿದವರು ಕೆಲವರು ಆತನಿಗೆ ಮನೋವೈಕಲ್ಯ ಇರಬೇಕು ವೈದ್ಯರಿಗೆ ತೋರಿಸಿ ಎಂದರು. ಆದರೆ ಆತನ ಮನೆಯವರು ಹಾಗೆ ತಿಳುವಳಿಕೆ ಹೇಳಿದವರಿಗೇ ಚೆನ್ನಾಗಿ ಬಯ್ದು ಆ ಯುವಕನನ್ನು ದೈವಾಂಶ ಸಂಭೂತನಂತೆ ಉಪಚರಿಸತೊಡಗಿದರು. ದೇವಲೋಕಕ್ಕೆ ಹೋಗಿ ದಂಡಿಗೆ ತರುವುದಾಗಿ ಆತ ಹೇಳಿದ್ದನಷ್ಟೆ. ಆ ನಿರ್ದಿಷ್ಟ ದಿನ ಬಂತು. ಅವತ್ತು ಆತನನ್ನು ಊರ ತುಂಬಾ ವೈಭವದ ಮೆರವಣಿಗೆ ಮಾಡಲಾಯಿತು. ಆನಂತರ ಮೆರವಣಿಗೆ ಹಣಮದ್ದೇವರ ಗುಡಿ ಬಳಿ ಬಂತು. ಆ ಗುಡಿಯ ಎದುರುಗಡೆ ಕವಲಾಗಿಹೊಡೆದ ಎತ್ತರದ ಮರವೊಂದಿತ್ತು. ಮೆರವಣಿಗೆ ಗುಡಿಯನ್ನು ಸಮೀಪಿಸುತ್ತಲೇ ಆ ಯುವಕ, ಬಂದೂಕಿನಿಂದ ಚಿಮ್ಮಿದ ಗುಂಡಿನಂತೆ ಧಡಕ್ಕನೆ ಮೆರವಣಿಗೆಯ ಗುಂಪಿನಿಂದ ಹೊರಬಂದು ಗುಡಿ ಎದುರಿನ ಆ ಮರವನ್ನು ಧಡಧಡ ಹತ್ತಿಬಿಟ್ಟ. ಮರದ ತುಟ್ಟತುದಿ ತಲುಪಿದವನೇ ಆಗಸಕ್ಕೆ ಅಂದರೆ ದೇವಲೋಕಕ್ಕೆ ಹೋಗುವವನಂತೆ ಹಾರಿ ದಬಾರನೆ ನೆಲಕ್ಕೆ ಬಿದ್ದ. ಸ್ಥಳದಲ್ಲೇ ಪ್ರಾಣಬಿಟ್ಟ. ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬ ನಾವು ತರಗತಿಯಲ್ಲಿ ಪಾಠ ಕೇಳುತ್ತಿರುವಾಗಲೇ ಶಾಲೆಗೆ ಓಡಿಬಂದು ನಮ್ಮ ಮಾಸ್ತರರಿಗೆ ವಿವರಿಸಿದ್ದುಂಟು. ಆ ನಂತರ ಹಾಗೆ ಪ್ರಾಣತ್ಯಾಗ ಮಾಡಿದ ಯುವಕ ನಮ್ಮ ಭಾಗದಲ್ಲಿ ಪೂಜ್ಯನೂ ಆಗಿದ್ದುಂಟು...
***
ಮಲ್ಲಾಡಿಹಳ್ಳಿಯಲ್ಲೇ ನಡೆದ ಒಂದು ಘಟನೆ. ನಾನು ಅಲ್ಲಿ ಅಧ್ಯಾಪಕನಾಗಿದ್ದಾಗ ಆಗಾಗ್ಗೆ ಒಬ್ಬ ಕಣ್ಣು ವೈದ್ಯರು ಬರುತ್ತಿದ್ದರು. ಆಯುರ್ವೇದ ಅಭ್ಯಾಸ ಮಾಡಿದ್ದ ಸಂಭಾವಿತ ವೈದ್ಯರು ಅವರು. ಅವರ ಹೆಸರು ನನಗೆ ಸರಿಯಾಗಿ ತಿಳಿಯದು. ನಾನಂತೂ ಅವರನ್ನು 'ಕೋಟ್ ಡಾಕ್ಟರ್' ಎಂತಲೇ ಕರೆಯುತ್ತಿದ್ದೆ. ಯಾಕೆಂದರೆ ಅವರು ಯಾವಾಗಲೂ ಒಂದು ಕರೀ ಕೋಟು ಧರಿಸಿಯೇ ಇರುತ್ತಿದ್ದರು.
ಒಂದು ಸಾರಿ ಅವರು ಈ ಊರಿನಲ್ಲಿ ನೇತ್ರ ಚಿಕಿತ್ಸೆ ನಡೆಸುವ ಇಚ್ಛೆ ವ್ಯಕ್ತಪಡಿಸಿದರು. ನನ್ನ ಅಣ್ಣನ ಮಗನೂ ವೈದ್ಯನೇ ಆಗಿದ್ದು ಇದೇ ಊರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ಅಲ್ಲಿಯೇ ತಾವು ಇಂಥ ದಿನ ಚಿಕಿತ್ಸೆ ನಡೆಸುವುದಾಗಿಯೂ, ಅದಕ್ಕಾಗಿ ಸಾಧ್ಯವಾದಷ್ಟು ಜನರನ್ನು ಸೇರಿಸಬೇಕೆಂದೂ ಕೇಳಿಕೊಂಡರು. ನಿರ್ದಿಷ್ಟ ದಿನ ಬೇಗನೇ ಬಂದು ಕ್ಲಿನಿಕ್‌ಗೆ ಭೇಟಿ ನೀಡಿದರು. ಆಗ ನಾನು ಒಂದು ಕಾದಂಬರಿ ಬರೆಯುವಲ್ಲಿ ಮಗ್ನನಾಗಿದ್ದೆ. ಮಧ್ಯಾಹ್ನ ಡಾಕ್ಟರ್ ಸಪ್ಪೆ ಮೋರೆ ಹಾಕಿಕೊಂಡು ಬಂದರು. ಪ್ರಾಯಶಃ ಚಿಕಿತ್ಸೆಗೆ ಹೆಚ್ಚು ಜನ ಬಂದಿರಲಿಲ್ಲವೆಂದು ಕಾಣುತ್ತದೆ. 'ಹಾಗೇನು?' ಎಂದು ಕೇಳಿದೆ. ಅವರು ಆ ಬಗ್ಗೆ ಹೆಚ್ಚೇನೂ ಹೇಳಲಿಲ್ಲ. ಬದಲಿಗೆ ಏನು ಬರೆಯುತ್ತಿದ್ದಿರಿ? ಎಂದರು. 'ಕಾದಂಬರಿ' ಎಂದೆ. ಓ ಅದೆಲ್ಲಾ ಬರಿಯುತ್ತೀರೇ ಎಂದವರೇ ಕ್ಷಣ ಹೊತ್ತು ಮೌನವಾದರು. ಆಮೇಲೆ ಗಹನವಾದ ವಿಚಾರವೊಂದನ್ನು ಹೇಳುವಂತೆ, 'ಪಾಟೀಲರೇ, ಜಗತ್ತಿನಲ್ಲಿ ಎಷ್ಟೆಲ್ಲಾ ಭಾಷೆಗಳೂ, ಲಿಪಿಗಳೂ ಇವೆ ಅಲ್ಲವೇ? ಒಂದೊಂದು ಉದ್ಗಾರಕ್ಕೂ ಎಷ್ಟೆಲ್ಲಾ ಬಗೆಯ ಅಕ್ಷರ ರೂಪ ಇದೆಯಲ್ಲವೇ? ಇದರಿಂದ ಎಷ್ಟೊಂದು ತೊಡಕು. ಅದರ ಬದಲಿಗೆ ಎಲ್ಲರಿಗೂ ಅನುಕೂಲವಾಗುವಂತೆ ಒಂದೇ ಸಾಮಾನ್ಯ ಲಿಪಿ ಇದ್ದರೆ ಎಷ್ಟು ಚಂದ ಅಂದರು. ನಾನು, ಏ ಅದೆಲ್ಲಾ ವಾಸ್ತವದಲ್ಲಿ ಸಾಧ್ಯ ಇಲ್ಲ ಡಾಕ್ಟರೇ ಎಂದು ಅದರ ತೊಡಕುಗಳನ್ನೆಲ್ಲಾ ವಿವರಿಸಿದೆ. ಅವರು, "ಯಾಕೆ ಸಾಧ್ಯ ಇಲ್ಲ?" ಅಂದವರೇ, ಅಲ್ಲಿದ್ದ ಹಣ್ಣು, ತರಕಾರಿಯಲ್ಲೆಲ್ಲಾ ಕೆಲವು ಆಕಾರಗಳನ್ನು ಕತ್ತರಿಸಿ ತೋರಿಸುತ್ತಾ, "ಈ ಉದ್ಗಾರಕ್ಕೆ ಹೀಗೆ ಬರಿಯಬಹುದು" ಎಂದೆಲ್ಲಾ ಹೇಳುತ್ತಾ ಹೋದರು. ಸೆಖೆಯಿಂದಾಗಿಯೋ ಏನೋ ಸ್ವಲ್ಪ ಹೊತ್ತಿನ ಮೇಲೆ ತಮ್ಮ ಕರಿ ಕೋಟ್ ತೆಗೆದು ಗೋಡೆಯ ಮೊಳೆಗೆ ಸಿಕ್ಕಿಸಿದರು. ಆಗ ಅವರು ಧರಿಸಿದ್ದ ಅಂಗಿಯನ್ನು ನೋಡುತ್ತಲೇ ನಾನು ಅವಾಕ್ಕಾದೆ. ಅವರ ಅಂಗಿ ಮುಂಭಾಗದಲ್ಲಷ್ಟೇ ಅಂಗಿಯಾಗಿತ್ತು. ಹಿಂಭಾಗದಲ್ಲಿ ಖಾಲಿ ಬೆನ್ನು! ಆ ಮೂಲಕ ಅವರು ಬಟ್ಟೆ ಉಳಿಸುತ್ತಿದ್ದರು! ಅಷ್ಟು ವಿದ್ಯಾವಂತರಾದ ಅವರು ಕಡುಬಡತನದಲ್ಲಿ ಬೇಯುತ್ತಿದ್ದರು. ಅಂದು ನನಗೆ ಬಡತನದ ಮತ್ತೊಂದು ಮುಖದ ಸಾಕ್ಷಾತ್ ಅರಿವಾಯಿತು.
ಟಿಎಸ್‌ಐ
ರಾಜ್ಯೋತ್ಸವ ವಿಶೇಷಾಂಕದಲ್ಲಿ ಕಥಾ ಸಂಗತಿ - 02-11-2008 ದ ಸಂಡೆ ಇಂಡಿಯನ್

ರಸಾಯನದ ರಾಚೋಟಿ - ಡಾ. ಚಂದ್ರಶೇಖರ ಕಂಬಾರ
ಹಂಪಮ್ಮಜ್ಜಿಯ ಹಠಯೋಗ! - ಕುಂ. ವೀರಭದ್ರಪ್ಪ
ಮನದಾಳದಿಂದ ಮರೆಯಾಗದ ಮಾನವೀಯ ಮುಖಗಳು - ರಾಘವೇಂದ್ರ ಪಾಟೀಲ
ಬಹುಮುಖಿ ಭಯದ ಸುತ್ತ... - ವೈದೇಹಿ

Pejavara Seer to think twice - Letter in Prajavani Vachakaravani on 05-11-2008


Friday, July 4, 2008

Poem - Naanu Kattaleya Haadu Haaduttiruve


Poem

Naanu Kattaleya

Haadu Haaduttiruve

by

Chandrashekhara Talya

Hoogonchalu - An Audio CD - Lyrics by Chandrashekhara Talya


Hoogonchalu

An Audio CD

Lyrics by

Chandrashekhara Talya

Music Composer

Upasana Mohan